Sunday, May 11, 2014

" ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?

`ಅಮ್ಮಂದಿರ ದಿನ'!
" ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?
ಮತ್ತೊಂದು `ಅಮ್ಮಂದಿರ ದಿನ'! ಎಲ್ಲೆಡೆ ಕಾರ್ಡ್ ಕೊಳ್ಳುವ, ಹೂವಿನಿಂದ ವಜ್ರದವರೆಗೂ ಶಕ್ತ್ಯಾನುಸಾರ ಕೊಡುಗೆ ನೀಡಿ ಇನ್ನೊಂದು `ಅಮ್ಮಂದಿರ ದಿನ'ದವರೆಗೆ ಅಮ್ಮನನ್ನು ಮರೆತುಬಿಡುವ ಸಂಭ್ರಮ!
ಅಮ್ಮ ಸತ್ತ ಮೇಲೆ ಶ್ರಾದ್ಧ ಮಾಡಿ ನೆನಪಿಸಿಕೊಳ್ಳುವ (ಹೆಣ್ಣು ಮಕ್ಕಳಿಗೆ ಅದೂ ಇಲ್ಲ!) ಅಥವಾ `ಬೂದಿ ಬುಧವಾರ'ದಂದೋ, `ಮಹಾಲಯ ಅಮಾವಾಸ್ಯೆ'ಯಂದೋ ಪಿತೃಗಳಿಗೆ ತರ್ಪಣ ನೀಡುವ ನಮ್ಮ ಸಂಪ್ರದಾಯಗಳನ್ನೂ ಮೀರಿ ಇಂದು ಬೆಳೆದು ನಿಂತಿರುವ `ಮದರ್ಸ್‌ ಡೇ' ಬಂದಿದ್ದಾದರೂ ಎಲ್ಲಿಂದ? ದೂರದ ಅಮೆರಿಕೆಯಿಂದ. ಪಾಶ್ಚಾತ್ಯ ಜಗತ್ತಿನಲ್ಲೂ ಇರಬಹುದಾದ ಮೌಲ್ಯಯುತ ಜೀವನ- ಆಚರಣೆಗಳನ್ನು ಭಾಗಶಃವಾಗಿ ಮಾತ್ರ ಸ್ವೀಕರಿಸುವ ನಮ್ಮ ಎಂದಿನ ಅಭ್ಯಾಸದಂತೆ `ಮದರ್ಸ್‌ ಡೇ'ಯ ಹಿನ್ನೆಲೆ, ಮೌಲ್ಯ ಯಾವುದನ್ನೂ ತಿಳಿಯದೆ ನಾವು ಆಚರಿಸುವ ಈ ದಿನ ಅರ್ಥಹೀನವೇ ಸರಿ.
1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.
ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!
ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.
ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.
ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!
ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.
1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.
ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.
1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.
`ತಾಯಂದಿರ ದಿನ' ಅಮ್ಮಂದಿರಿಗೆ ಸಂತಸದೊಂದಿಗೆ ದುಃಖ ತರುವ ದಿನವೂ ಆಗಬಹುದಷ್ಟೆ. ಮಕ್ಕಳಿಲ್ಲದ `ಮಾತೆ'ಯರಿಗೆ ತಮಗೆ ಮಕ್ಕಳಿಲ್ಲ ಎಂದು ನೆನಪಿಸುವ ದಿನ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ತನ್ನ ಮಕ್ಕಳನ್ನು ನೆನೆಯುವ ನೋವು ಅಥವಾ ತಾಯಿಯನ್ನು ಕಳೆದುಕೊಂಡ ಮಗಳಿಗೆ ತನ್ನ ತಾಯಿಯನ್ನು ಸ್ಮರಿಸುವ ದುಃಖದ ದಿನ. ಹಾಗೆಯೇ ತಾಯಿ ಪ್ರೀತಿ ಸಿಗದ ಕಂದಮ್ಮಗಳಿಗೆ `ಪ್ರೀತಿ' ಎಂದರೇನೆಂಬುದೇ ಅರ್ಥವಾಗಿಲ್ಲ ಎಂಬುದನ್ನು ನೆನಪಿಸುವ ಕ್ಷಣವೂ ಹೌದು.
ಇವೆಲ್ಲದರ ಮಧ್ಯೆ ಭಾರತದ `ಅಮ್ಮ'ನಂತೂ ಅನಾರೋಗ್ಯ, ಅನಕ್ಷರತೆ, ಬಡತನ, ಅತ್ಯಾಚಾರಗಳ ನಡುವೆ ನಲುಗಿ ಹೋಗಿರುವವಳು. ಹೊರಗೆ ದುಡಿಯುತ್ತಿದ್ದರೂ, ಆರ್ಥಿಕ ಸ್ವಾತಂತ್ರ್ಯ ಇಲ್ಲದ, ಓದಿದ್ದರೂ ತನ್ನ ಅಭಿಪ್ರಾಯ ಹೇಳಲಾಗದ, ಸದಾ ಮಕ್ಕಳು- ಮನೆಯ ಬಗ್ಗೆ ಚಿಂತಿಸುವ `ಅಮ್ಮ'ನಿಗೆ ತನ್ನ ಆರೋಗ್ಯ, ಆಸೆ, ಆಕಾಂಕ್ಷೆಗಳ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. 16ರ ವಯಸ್ಸಿಗೇ ಮಕ್ಕಳನ್ನು ಹೆರುವ ಹುಡುಗಿ `ಅಮ್ಮ', 50ಕ್ಕೆ ಮಕ್ಕಳಿಬ್ಬರನ್ನೂ ಅಮೆರಿಕಕ್ಕೆ ಕಳುಹಿಸಿ ಹಳ್ಳಿಯಲ್ಲಿ ನಲುಗುವ `ಅಮ್ಮ' ಅಥವಾ 60ಕ್ಕೆ ಸಾಮರ್ಥ್ಯ ಇರದಿದ್ದರೂ ಮೊಮ್ಮಕ್ಕಳನ್ನು ಮಕ್ಕಳಂತೆ ಕಷ್ಟಪಟ್ಟು ಬೆಳೆಸುವ `ಅಮ್ಮ'... ಹೀಗೆ ಅಮ್ಮಂದಿರ ಜವಾಬ್ದಾರಿ ವೈವಿಧ್ಯಮಯ!
`ಅಮ್ಮಂದಿರ ದಿನ' ಅಮೆರಿಕದಿಂದ ಬಂದ ಅರ್ಥಪೂರ್ಣ ಆಚರಣೆ ಎಂದು ಬೀಗುತ್ತಿದ್ದ ನಮಗೆ ಅದೊಂದು `ಭ್ರಮೆ' ಎಂಬುದು ಅರಿವಾಗಬೇಕಿದೆ. `ಅಮ್ಮಂದಿರ ದಿನ'ವಾಗಲೀ, `ಶ್ರಾದ್ಧ'ವಾಗಲೀ `ಅಮ್ಮ'ನನ್ನು ನೆನೆಸುವ ಮತ್ಯಾವುದೇ ಆಚರಣೆಯಾಗಲೀ, ಪ್ರಾಯೋಗಿಕವಾಗಿ ಅದು ಸಂಕೇತಿಸುವ ಮೌಲ್ಯಗಳು `ರೂಢಿ'ಗಳಾಗಿ ಬದಲಾಗಬೇಕು. `ಅಮ್ಮ'ನಿಗೆ ಸಮಯ ಕೊಡದ, `ಅಮ್ಮ'ನ ಆರೋಗ್ಯದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ, ನಮ್ಮ `ಅಮ್ಮ'ನನ್ನು ನನ್ನ ಹೆಂಡತಿ/ ಅತ್ತಿಗೆ/ ಅಣ್ಣ- ತಮ್ಮ- ಅಕ್ಕ- ತಂಗಿ ನೋಡಿಕೊಳ್ಳಲಿ ಎನ್ನುವ ನಾವು ಬಹುತೇಕರು, ಇಂದು ಕೇವಲ `ಅಮ್ಮಂದಿರ ದಿನ'ದ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ ಅಲ್ಲವೇ?
https://www.facebook.com/vijay.kannadiga1

Saturday, May 10, 2014


 
 
ಪ್ರೀತಿಯ...

ನಲ್ಲೆ ಕೇಳಿದಳೆಂದು ತಂದು ಕೊಟ್ಟೆ,
ಕೆಂಪು ಕಲ್ಲಿನ ಮುತ್ತೊಂದು
ಆದರೆ,
ಅದಕ್ಕೆ ,
ಅವಳು ಹೇಳಬೇಕೆ;
ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...!
" ......." & "......." ?

ಪ್ರೀತಿಯಿಂದ ಪ್ರೀತಿಗಾಗಿ
ಕವಿ  ಕನ್ನಡಿಗ ವಿಜಯ್. ಜಿ. ಹೆಮ್ಮರಗಾಲ

ಅಮ್ಮ ಎಂದರೆ ಏನೋ ಹರುಷವೋ ನನ್ನ ಪಾಲಿಗೆ ಅವಳೇ ದೈವವೋ........ಎಷ್ಟು ಚೆಂದನೆಯ ಸಾಲುಗಳು ನನ್ನಮ್ಮನ ಹಾಗೇ

ಅಮ್ಮಂದಿರ ದಿನ
        ನಾಳೆ ಭಾನುವಾರ ಅಮ್ಮಂದಿರ ದಿನ. ಹೌದು ಅಮ್ಮನಿಗೆ ನಮ್ಮೆಲ್ಲರ ಜೀವನದಲ್ಲಿ ಒಂದು ವಿಶೇಷ ಸ್ಥಾನ. ಒಂದು ಸಣ್ಣ ನೋವಾದರೂ ನಾವು ಅಮ್ಮ ಎಂದೇ ಕೂಗುವುದು.. ಅಮ್ಮ ಎಂಬ ಪದದಲ್ಲೇ ಎಷ್ಟೋ ಅರ್ಥ ಎಷ್ಟೋ ಭಾವನೆಗಳು ತುಂಬಿವೆ.. ಅಮ್ಮಂದಿರ ದಿನ ಎಂದಾಗ ಅಮ್ಮನ ಬಗ್ಗೆ ಏನಾದ್ರೂ ಬರೀಬೇಕು ಅನಿಸ್ತು.. ಅಮ್ಮನ ಬಗ್ಗೆ ದೊಡ್ಡ ದೊಡ್ಡ ಪದಗಳನ್ನೆಲ್ಲ ಉಪಯೋಗಿಸಿ ಎಷ್ಟೋ ಜನ ರೀತಾರೆ.. ಬರೆದಿದ್ದಾರೆ.. ನಂಗೆ ಹಾಗೇನೂ ಬರೆಯಲು ನೆನಪಾಗುತ್ತಿಲ್ಲ. ಆದರೆ ಒಂದು ಘಟನೆ ಹೇಗೆ "ಅಮ್ಮ" ಎಂಬ ಶಬ್ದದ ಬಗ್ಗೆ "ಅಮ್ಮ" ಎಂಬ ಜೀವದ ಬಗ್ಗೆ ನನ್ನ ಕಣ್ತೆರೆಸಿತು ಅನ್ನುವುದನ್ನು ಬರೆಯಲೇಬೇಕು ಅಂತ ಅನಿಸಿತು.        ಸುಮಾರು ವರ್ಷಗಳ ಹಿಂದೆ.. ಆವಾಗ ನಾನು ಬರೀ ಇನ್ನಿಲ್ಲದ ಕಾರಣಕ್ಕೆ ಅಮ್ಮ ನೊಂದಿಗೆ ಜಗಳವಾಡುತ್ತಿದ್ದೆ. ಬರೀ ಅಮ್ಮನ ಮಾತಿಗೆ ಎದುರಾಡುವುದು.. ಸಿಡುಕುವುದೇ ಸಾಮಾನ್ಯವಾಗಿತ್ತು. ಅದೊಂದು ವಯಸ್ಸೇ ಹಾಗೆನೋ ಅಮ್ಮ ಹೇಳುವುದೆಲ್ಲ ತಪ್ಪು ಅಂತನೇ ಅನಿಸ್ತಿತ್ತು. ಅವತ್ತು ಒಂದಿನ ಹಾಗೇ ಆಯ್ತು ಅಮ್ಮ ನೊಂದಿಗೆ ಚೆನ್ನಾಗಿ ಜಗಳವಾಡಿ ಮುಖ ಊದಿಸಿಕೊಂಡು ಕುಳಿತಿದ್ದೆ. ಅವತ್ತು ನನ್ನ ಅಜ್ಜಿ(ಅಮ್ಮನ ಅಮ್ಮ) ಮನೇಲಿದ್ದರು. ಬಾ ಇಲ್ಲಿ ಏನೋ ಹೇಳಬೇಕು ಅಂತ ಕರೆದರು. ಗೊತ್ತಾಯ್ತು ನಂಗೆ ಅಮ್ಮನ ಹತ್ರ ಜಗಳ ಆದಿದೆನಲ್ಲ ಅದಕ್ಕೆ ಏನೋ ಹೇಳಕ್ಕೆ ಕರೆದರು ಅಂತ ಅವರು ಯಾವತ್ತು ಬಯ್ಯುತ್ತಿರಲಿಲ್ಲ. ಮನಸ್ಸಿಗೆ ನಾಟುವ 2 ತಿಳುವಳಿಕೆ ಮಾತು ಹೇಳುತ್ತಿದ್ದರು. ಅವತ್ತು ಹಾಗೇ ಕೇಳಿದರು ನನ್ನ "ಅಮ್ಮ ಅಂದ್ರೆ ಏನು ಅಂತ ಗೊತ್ತಾ ನಿಂಗೆ?" ಏನು ಹೇಳಬೇಕೋ ಗೊತ್ತಾಗಲಿಲ್ಲ ನನಗೆ.. ನನಗೆ ಗೊತ್ತು ಅಮ್ಮ ಅಂದ್ರೆ ಏನು ಅಂತ ನಿಂಗೆ ಹೇಳಲಿಕ್ಕೆ ಬರುವುದಿಲ್ಲ ಅಂತ ನನ್ನ ಕೇಳು ಹೇಳ್ತೀನಿ. ಭೂಮಿ ಮೇಲೆ ಕಣ್ಣು ಬಿಟ್ಟ ದಿನದಿಂದ ಅಮ್ಮ ನನ್ನು ನೋಡಿಲ್ಲ.. ಅಮ್ಮ ಅಂತ ಅಮ್ಮನನ್ನು ಒಂದು ಸಲವೂ ಕರೆದಿಲ್ಲ. ಅಮ್ಮನ ಮಡಿಲಲ್ಲಿ ಒಂದಿನನೂ ಮಲಗಿಲ್ಲ.. ಅದಕ್ಕೆ ನನಗೆ ಅಮ್ಮನ ಮಹತ್ವ ಗೊತ್ತು.. ನಿಂಗೆ ಗೊತ್ತಿಲ್ಲ ಅಂತ ಅಂದ್ರು. ಅಜ್ಜಿ ಅವರ ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಒಮ್ಮೆ ಯಾವಾಗಲೋ ಅವರ ಬಾಯಲ್ಲೇ ಕೇಳಿದ್ದು ನೆನಪಾಯಿತು. ಅವರ ಮಾತುಗಳು ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡಿತು ಅಂದ್ರೆ ನಾನು ಅಮ್ಮನ ಜೊತೆ ಅಷ್ಟು ದಿನ ನಡೆದುಕೊಂಡಿದ್ದೆಲ್ಲ ನೆನಪಿಸಿಕೊಂಡು ಸುಮಾರು ಹೊತ್ತು ಜೋರಾಗಿ ಅತ್ತೆ. ಆವಾಗಲೆ ನಿರ್ಧಾರ ಮಾಡಿದೆ ಇನ್ನೆಂದೂ ಅಮ್ಮಂಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು ಅಂತ...

            ಅಮ್ಮ ಯಾವಾಗಲೂ ಹೇಳಿಕೊಡ್ತಿದ್ಲು ನಮಗೆ " ನಮ್ಮಿಂದ ಇನ್ನೊಬ್ಬರನ್ನು ಸಂತೋಷಪಡಿಸಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ ಆದರೆ ನಮ್ಮಿಂದ ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಕಯ್ಯಲ್ಲೇ ಇದೆ ನಾವು ಹಾಗೇ ಇರಬೇಕು ಕೂಡ " ಅಂತ ಅದನ್ನೇ ನಾನು ಪಾಲಿಸುತ್ತಿದ್ದೇನೆ ಇವತ್ತಿಗೂ. ಅಮ್ಮನ ವಿಷ್ಯದಲ್ಲಿ ಕೂಡ. ಅವತ್ತಿನಿಂದ ಅಮ್ಮ ನೊಂದಿಗೆ ಒಂದೊಂದು ಮಾತು ಆಡುವಾಗಲೂ ಯೋಚಿಸುತ್ತೇನೆ ಅಮ್ಮನಿಗೆ ಏನಾದ್ರೂ ಬೇಜಾರಾಗಬಹುದ ಹೀಗೆ ಹೇಳಿದರೆ ಅಂತ.. ಒಂದೊಂದು ಸಲ ಹಾಗೆ ಅನ್ನಿಸಿದರೆ ಅಮ್ಮನನನ್ನು ಸಮಾಧಾನಿಸುತ್ತೇನೆ ಹೋಗಿ ..ನಾನು ಹಾಗಲ್ಲ ಹೇಳಿದ್ದು ಹೀಗೆ ಹೀಗೆ ಅಂತ.. ಅಮ್ಮ ಖುಷಿಯಾಗಿರೋದನ್ನ ನೋಡೋದೇ ಖುಷಿ. ಅಷ್ಟೆಲ್ಲಾ ಹೇಳಿ ನನ್ನ ಕಣ್ಣು ತೆರೆಸಿದ ಅಜ್ಜಿ ನಮ್ಮನ್ನು ಬಿಟ್ಟು ಹೋಗಿ 5-6 ವರ್ಷಗಳೇ ಆಯಿತು.. ಆದರೂ ಅವರಂದು ಆಡಿದ ಮಾತುಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಇವೆ. ಅಮ್ಮ ಇಂದಿಗೂ ಅವರನ್ನು (ಅಮ್ಮನ ಅಮ್ಮ) ನೆನೆಸಿಕೊಂಡು ಕಣ್ಣೀರು ಹಾಕಿದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಅಮ್ಮ ಅಂದರೇ ಹಾಗೆ. ನಮ್ಮ ನೋವಿಗೆ ಕಣ್ಣೀರಿದುವವಳು ನಮ್ಮ ಖುಷಿಯಲ್ಲೇ ಖುಷಿ ಕಾಣುವವಳು. ಅದಕ್ಕೆ ಅಮ್ಮಂದಿರ ದಿನಕ್ಕೆ ಅಂತ ಬರವಣಿಗೆ ಅಮ್ಮನಿಗೆ ಒಂದು ಪ್ರೀತಿಯ ಕಾಣಿಕೆ.

ಮುಗಿಸುವ ಮುನ್ನ,
 ಅಮ್ಮನಿಗೆ ಅಂತ ಬರೆದ ಒಂದು ಪದ್ಯ ಇವತ್ತು ಯಾಕೋ ನೆನಪಾಗುತ್ತಿದೆ. ಇದೂ ಅಮ್ಮನಿಗಾಗಿ

ಅಮ್ಮ ನಿನ್ನ ಹೊಗಳಲು
ಯಾವ ಪದವ ಹುಡುಕಲಿ?
ಅಮ್ಮ ನಿನ್ನ ಮಮತೆ ಪ್ರೀತಿಯ
ಹೇಗೆ ತಾನೆ ಮರೆಯಲಿ?

ಅಮ್ಮ ನಿನ್ನ ಮಡಿಲದು
ಪ್ರೀತಿ ಸುಧೆಯ ಕಡಲು.
ಅಮ್ಮ ನಿನ್ನ ಮಡಿಲದು
ಸ್ವರ್ಗಕಿಂತ ಮಿಗಿಲು.

ಅಮ್ಮ ನಿನ್ನ ನುಡಿಗಳು
ಹಾಲು ಜೇನ ಸಂಗಮ.
ಅಮ್ಮ ನಿನ್ನ ಮೊಗವದು
ಹುಣ್ಣಿಮೆಯ ಚಂದ್ರಮ.

ಅಮ್ಮ ನೀನು ಸನಿಹವಿರಲು
ಗವನ್ನೇ ಮರೆವೆನು.
ಅಮ್ಮ ನಿನ್ನ ಜೊತೆಯಿರಲು
ಗವನ್ನೇ ಗೆಲ್ಲುವೆನು.

ಮುಂದಿನಾ ಜನುಮವಿರಲು
ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು
ಹರುಷದಲ್ಲಿ ಕುಣಿವೆನು.

"......" &  "......" : ?
ಕವಿ ಕನ್ನಡಿಗ ವಿಜಯ್ ಜಿ. ಹೆಮ್ಮರಗಾಲ

Friday, May 9, 2014

ಸಂಧ್ಯಾರಾಗ - ಅ.ನ.ಕೃಷ್ಣರಾಯರು

ಅ.ನ.ಕೃ ಅವರ ಕಾದಂಬರಿ ಸಂಧ್ಯಾರಾಗ ಕುರಿತು

ಆದರದ ಕನ್ನಡಿಗರಲ್ಲಿ ಅ.ನ.ಕೃಷ್ಣರಾಯರದು ಅಪೂರ್ವ ವ್ಯಕ್ತಿತ್ವ, ಅಪೂರ್ವ ಪಾತ್ರ. ಅವರ ರೂಪ ಆಕರ್ಷಕ. ಖಾಸಗೀ ಸಂಭಾಷಣೆಯಲ್ಲಿ, ಮಾತಿನಲ್ಲಿ ಲವಲವಿಕೆ, ಚುರುಕು, ಸ್ನೇಹಮಯ ಹಾಸ್ಯ. ವೇದಿಕೆ ಭಾಷಣದಲ್ಲಿ ಮಾತಿನ ಮೋಡಿಯ ಅನುಭವವಾಗುತ್ತಿತ್ತು. ಗಂಭೀರ ಚಿಂ...ತನೆ, ಸ್ವಂತಿಕೆ, ಶುದ್ಧ ಅಭಿರುಚಿಯ ಹಾಸ್ಯ ಇವುಗಳ ತ್ರಿವೇಣಿ ಸಂಗಮ ಅವರ ಭಾಷಣ. ಕನ್ನಡದ ಸೊಗಸು, ಕನ್ನಡದ ಶಕ್ತಿ, ಕನ್ನಡದ ತೇಜಸ್ಸು, ಅವರ ಭಾಷಣದಲ್ಲಿ ಮೆರೆಯುತ್ತಿದ್ದವು. ಕನ್ನಡ ನಾಡು ನುಡಿಗಳ ಅಭಿಮಾನ ನಾಡಿಯಲ್ಲಿ ಮಿಡಿಯುತ್ತಿತ್ತು; ಮಾತಿನಲ್ಲಿ ಮಿಂಚುತ್ತಿತ್ತು. ಕನ್ನಡಪರ ಹೋರಾಟಕ್ಕೆ ವಿಶಿಷ್ಟ ಘನತೆಯನ್ನು ತಂದುಕೊಟ್ಟ ಅಪೂರ್ವ ಸೇನಾನಿ ಅನಕೃ.

ಕನ್ನಡ ಕಾದಂಬರಿ ಜಗತ್ತಿನಲ್ಲಿ ಅವರದು ವಿಶಿಷ್ಟ ಪಾತ್ರ. ಸಾವಿರಾರು ಜನರನ್ನು ಕನ್ನಡ ಕಾದಂಬರಿಗೆ ಸೆಳೆದದ್ದು ಅವರ ಲೇಖನಿ. ಕಾದಂಬರಿಯನ್ನು ಸಾಮಾಜಿಕ ಕ್ರಾಂತಿಯ ಪ್ರಬಲ ಸಾಧನವನ್ನಾಗಿ ಮಾಡಲು ಕೃಷ್ಣರಾಯರು ಪ್ರಯತ್ನಿಸಿದರು. ಅವರ ಪ್ರಾರಂಭದ ಕಾದಂಬರಿಗಳಲ್ಲಿ ಒಂದು ೧೯೩೫ರಲ್ಲಿ ಪ್ರಕಟವಾದ ‘ಸಂಧ್ಯಾರಾಗ’. ಕಾದಂಬರಿಕಾರ ಅ.ನ.ಕೃ ಅವರನ್ನು ಸ್ಮರಿಸಿದಾಗ, ನೆನಪಿಟ್ಟು ಕೊಳ್ಳಬೇಕಾದ ಒಂದು ಅಂಶ ಎಂದರೆ ನಮ್ಮ ಕಾದಂಬರಿಯ ಚರಿತ್ರೆಯ ಪ್ರಾರಂಭದಲ್ಲಿ ಮೂಡಿಬಂದ ಪ್ರತಿಭೆ ಅವರದು, ಎನ್ನುವುದು. ಅವರ ‘ಜೀವನಯಾತ್ರೆ’ ೧೯೩೪ರಲ್ಲಿ ಪ್ರಕಟವಾಯಿತು. ಆಗ ಕನ್ನಡದಲ್ಲಿಯೇ ಪ್ರಾರಂಭದ ಪ್ರಯತ್ನಗಳನ್ನು ಬಿಟ್ಟರೆ, ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’, ಕೆರೂರು ವಾಸುದೇವಾಚಾರ್ಯರ ‘ಇಂದಿರಾ’, ಗಳಗನಾಥರ ‘ಮಾಧವಕರುಣಾವಿಲಾಸ’, ಎಂ.ಎಸ್. ಪುಟ್ಟಣ್ಣರ ‘ಮಾಡಿದ್ದುಣ್ಣೊ ಮಹರಾಯ’, ಇನ್ನೆರಡು ಕಾದಂಬರಿಗಳು, ಶಿವರಾಮಕಾರಂತರ ‘ದೇವದೂತರು’, ‘ಚೋಮನದುಡಿ’, ಬೆಟೆಗೆರೆ ಕೃಷ್ಣ ಶರ್ಮರ ‘ಸುದರ್ಶನ’, ಹೀಗೆ ಎಂಟೊಂಬತ್ತು ಕಾದಂಬರಿಗಳು ಮಾತ್ರಾ ಪ್ರಕಟವಾಗಿದ್ದವು. ಇದನ್ನು ಗಮನಿಸಿದಾಗ, ಅ.ನ.ಕೃ ಅವರ ‘ಜೀವನಯಾತ್ರೆ’, ‘ಉದಯರಾಗ’ ಮತ್ತು ‘ಸಂಧ್ಯಾರಾಗ’ಗಳ ಸಾಧನೆ ಸ್ಪಷ್ಟವಾಗುತ್ತದೆ. ಶಿವರಾಮಕಾರಂತರು, ಕೃಷ್ಣರಾಯರು ಕನ್ನಡ ಕಾದಂಬರಿಗೆ ರೂಪ ಕೊಟ್ಟರು. ವಾಸ್ತವತಾ ಪರಂಪರೆಯನ್ನು ನಿರ್ಮಾಣ ಮಾಡಿದರು. ಕನ್ನಡ ಕಾದಂಬರಿಯು, ಮನರಂಜನೆಯ ಮಾಧ್ಯಮವಷ್ಟೇ ಆಗದೇ, ಮನುಷ್ಯ ಸ್ವಭಾವವನ್ನು ಸಮಾಜವನ್ನು ಅರ್ಥಮಾಡಿಕೊಳ್ಳುವ, ಸಾಧನವಾಗುವಂತೆ ಮಾಡಿದರು.

ಸಂಧ್ಯಾರಾಗದಲ್ಲಿ ವೀಣೆ ಶೇಷಣ್ಣನವರು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ನಿಜವಾಗಿ ಇದ್ದ ವ್ಯಕ್ತಿಗಳ ಪ್ರಸ್ತಾಪವೂ ಇದೆ. ಆದ್ದರಿಂದ ಈ ಕಾದಂಬರಿಯ ಕ್ರಿಯೆ ಸುಮಾರು ೧೯೧೫-೧೯೨೦ ಎಂದು ಭಾವಿಸಬಹುದು. ಕ್ರಿಯೆಯು ಒಂದು ಹಳ್ಳಿಯಲ್ಲಿ ಪ್ರಾರಂಭವಾಗಿ, ಬೆಂಗಳೂರಿಗೆ ಸಾಗುತ್ತದೆ. ಒಂದು ಮಧ್ಯಮ ತರಗತಿಯ ಕುಟುಂಬದ ಕಥೆ ಇದು. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಎರಡು ಕಥೆಗಳು, ಸೊಗಸಾಗಿ ಹೆಣೆದುಕೊಂಡು ಈ ಕಾದಂಬರಿಯ ಕ್ರಿಯೆಯನ್ನು ಸೃಷ್ಟಿ ಮಾಡಿವೆ. ಒಂದು ಮಧ್ಯಮ ವರ್ಗದ ಕುಟುಂಬದ ಕಥೆ; ಮತ್ತೊಂದು ಸೂಕ್ಷ್ಮ ಸ್ವಭಾವದ ಭಾವಜೀವಿಯಾದ, ಸಂಗೀತಗಾರನ ಕಥೆ. ಇವೆರಡೂ ಕೂಡಿಕೊಳ್ಳುವುದು, ಈ ಸಂಗೀತಗಾರನು ಆ ಮಧ್ಯಮವರ್ಗದ ಕುಟುಂಬದ ಮಕ್ಕಳಿಲ್ಲಿ ಒಬ್ಬ ಎನ್ನುವ ಕಾರಣದಿಂದ. ಮಧ್ಯಮ ವರ್ಗದ ಕುಟುಂಬದ ಎರಡು ಪೀಳಿಗೆಗಳ ಏಳು-ಬೀಳುಗಳು ಒಂದು ಕಥೆ. ಅತ್ಯಂತ ಸೂಕ್ಷ್ಮ ಸ್ವಭಾವದ, ಕೋಮಲ ಮನಸ್ಸಿನ, ಅಸಾಧಾರಣ ಪ್ರತಿಭೆಯ ಸಂಗೀತಗಾರನು, ಇಹಲೋಕದ ಕಷ್ಟ, ಯಾತನೆ, ಇವುಗಳ ನಡುವೆ ಅರಳುವ ಪ್ರಕ್ರಿಯೆ ಇನ್ನೊಂದು ಕಥೆ.

೬೦ ವರ್ಷಗಳ ಹಿಂದೆ, ಪ್ರಕಟವಾದಾಗ, ‘ಸಂಧ್ಯಾರಾಗ’ವು ಅಸಾಧಾರಣ ಜನಪ್ರಿಯತೆಯನ್ನು ಗಳಿಸಿತು. ಕಾಲ ಸಾಗಿದಂತೆ, ಅಭಿರುಚಿಗಳು, ಸಾಹಿತ್ಯಿಕ ನಿರೀಕ್ಷಣೆಗಳು ಬದಲಾಗುತ್ತವೆ; ಸಾಹಿತ್ಯದ ಮಾನದಂಡಗಳೂ ಬದಲಾಗುತ್ತವೆ. ಇಂದಿನ ಓದುಗರಿಗೆ, ಕೆಲವು ಮಿತಿಗಳು ಗೋಚರವಾಗಬಹುದು. ಪಾತ್ರಗಳು ಅತಿ ಸರಳ ಎನಿಸಬಹುದು; ಹಲವೆಡೆಗಳಲ್ಲಿ ನಿರೂಪಣೆಗಳಲ್ಲಿ ಅತಿ ಭಾವುಕತೆ ಕಾಣಬಹುದು; ಸಂಗೀತಗಾರನಾಗಿ, ಲಕ್ಷ್ಮಣ ಪರೀಕ್ಷೆಗಳನ್ನು ಎದುರಿಸುವುದಿಲ್ಲ ಎನಿಸಬಹುದು. ಆದರೆ ಇಂದಿಗೂ, ‘ಸಂಧ್ಯಾರಾಗ’ವು ಓದುವಾಗ ಮನಸ್ಸನ್ನು ಸೆರೆಹಿಡಿದು, ಓದಿ ಮುಗಿಸಿದ ಮೇಲೆ, ಮನಸ್ಸಿನಲ್ಲಿ ಆಳವಾಗಿ ನಿಲ್ಲುತ್ತದೆ. ಇದಕ್ಕೆ ಹಲವು ಕಾರಣಗಳುಂಟು.

ಅ.ನ.ಕೃ ಹುಟ್ಟು ಕಥೆಗಾರರು. ಪಾತ್ರಗಳ ಮಾತು-ನಡೆಗಳಿಂದ, ಅವರನ್ನು ನಮ್ಮ ನಿಜ ಜೀವನ ವ್ಯಕ್ತಿಗಳಂತೆ ವಾಸ್ತವ ಗೊಳಿಸಿ, "ಮುಂದೇನಾಯಿತು? ..... ಮುಂದೇನಾಯಿತು?" ಎನ್ನುವ ಕುತೂಹಲವನ್ನು ಬೆಳಸಿಕೊಂಡು ಹೋಗಬಲ್ಲರು. ಅಲ್ಲಲ್ಲಿ, ವೃತ್ತಾಂತವು ನಿಂತು ರಾಗ-ಭಾವಗಳು, ಪುಟಿಪುಟಿಯುವ ನಾಟಕೀಯ (ಡ್ರ್ಯಾಮಟಿಕ್) ದೃಶ್ಯಗಳು, ನಮ್ಮ ಕಣ್ಣಮುಂದೆ ನಡೆಯುತ್ತವೆ. ಕಥೆಯ ದರ್ಶನಗಳು ಇಲ್ಲಿ ಸ್ಪಷ್ಟವಾಗುತ್ತದೆ; ಮೌಲ್ಯಗಳ ಅಗ್ನಿ ಪರೀಕ್ಷೆಯಾಗುತ್ತದೆ. ರಾಮಚಂದ್ರ ಹೆಂಡತಿಯನ್ನು ಒದ್ದಾಗ, ಅವನ ಮತ್ತು ವೆಂಕಟೇಶನ ನಡುವಣ ಮಾತು, ಸೋತ ರಾಮಚಂದ್ರ ವೆಂಕಟೇಶನನ್ನು ಕಾಣುವುದು--- ಇಂಥಹ ದೃಶ್ಯಗಳಲ್ಲಿ, ಇನ್ನು ಕೆಲವು ದೃಶ್ಯಗಳಲ್ಲಿ, ಉಳಿದ ಜಗತ್ತೆಲ್ಲಾ ಮಾಯವಾಗಿ, ಮೇಲೆ ಆಕಾಶ, ಕೆಳಗೆ ಭೂಮಿ ನಡುವೆ ಎರಡು ಹೃದಯಗಳು ಒಂದಕ್ಕೊಂದು ತೆರೆದುಕೊಳ್ಳುತ್ತವೆ. ಕಾಲ-ದೇಶಗಳನ್ನು ಮೀರಿ, ಪ್ರೀತಿ, ಅಂತಃಕರಣ, ಔದಾರ್ಯ ಬೆಳಗುತ್ತವೆ. ಇಂಥಹ ದೃಶ್ಯಗಳು, ಮನಸ್ಸಿನಲ್ಲಿ ನಿಂತು, ಪ್ರೀತಿ, ಅಂತಃಕರಣ, ಔದಾರ್ಯಗಳ ಸಂಗಮ, ಕೃತಿಗೆ ಶೃತಿಯಾಗಿಬಿಡುತ್ತದೆ. ಮೀನಾಕ್ಷಮ್ಮ ಸಾವಿತ್ರಮ್ಮನ ಕಿವಿಗೆ, ತನ್ನ ವಜ್ರದ ಓಲೆಗಳನ್ನು ಇಡುವುದು, ಇಂಥಹ ಒಂದು ದೃಶ್ಯ.


ಈ ಕಾದಂಬರಿಯ ಬಂಧ ವಿಶಿಷ್ಟವಾದದ್ದು. ಸನ್ನಿವೇಶಕ್ಕೆ ಪಾತ್ರದ ಪ್ರತಿಕ್ರಿಯೆ, ಪಾತ್ರಕ್ಕೆ ಸನ್ನಿವೇಶದ ಪ್ರತಿಕ್ರಿಯೆ. ಹೀಗೆ, ಪಾತ್ರ-ಸನ್ನಿವೇಶಗಳ ಪರಸ್ಪರ ಪ್ರತಿಕ್ರಿಯೆಯಿಂದ ಕ್ರಿಯೆ ಮುಂದುವರೆಯುತ್ತದೆ. ಇದರೊಂದಿಗೆ, ಇದಕ್ಕಿಂತಾ ಮುಖ್ಯವಾಗಿ, ಇನ್ನೊಂದು ಮಾತನ್ನು ಹೇಳಬೇಕು. ಮಧ್ಯಮ ವರ್ಗದ ಕುಟುಂಬದ ಕಥೆಯು, ಉದ್ದಕ್ಕೂ ಧ್ವನಿಸುವ ಮೌಲ್ಯವೆಂದರೆ, ಅಂತಃಕರಣ, ಪ್ರೀತಿ. ಅದು ಕಣ್ಣಮುಂದೆ ನಿಲ್ಲಿಸುವ ನೋಟವೆಂದರೆ, ಪ್ರೀತಿ, ಅಂತಃಕರಣ ಇವುಗಳ ಸೃಜನಶೀಲತೆ. ಪ್ರೀತಿ ಮತ್ತು ಅಂತಃಕರಣಗಳು, ಸಂಸಾರವನ್ನು ಉಳಿಸುತ್ತವೆ; ಕಟ್ಟುತ್ತವೆ; ಬೆಳೆಸುತ್ತವೆ. ಅಹಂಭಾವ, ದ್ವೇಷಗಳು ಒಡೆಯುತ್ತವೆ; ನಾಶಮಾಡುತ್ತವೆ. ಪ್ರೀತಿಯು ಸೃಜನಶೀಲ (ಕ್ರಿಯೇಟಿವ್). ರಾಯರು, ಮೀನಾಕ್ಷಮ್ಮ, ಸಾವಿತ್ರಮ್ಮ, ಶಾಮಣ್ಣ, ಇವರೆಲ್ಲಾ ಈ ಅರ್ಥದಲ್ಲಿ ಕ್ರಿಯೇಟಿವ್-ಸೃಜನಶೀಲರು. ಬದುಕಿನ ಸಂತೋಷವನ್ನು ಹೆಚ್ಚುಮಾಡುವವರು. ಕಾದಂಬರಿಯ ಕ್ರಿಯೆಯ ಎರಡನೇ ಎಳೆ - ಮತ್ತೊಂದು ಅರ್ಥದಲ್ಲಿ ಕ್ರಿಯೇಟಿವ್ ಆದ ಸೃಜನಶೀಲನಾದ ಸಂಗೀತಗಾರನದು. ಈ ಪ್ರತಿಭೆಯನ್ನು ಕಾದಂಬರಿಯಲ್ಲಿ ಬೆಳೆಸುವುದು ಪ್ರೀತಿ, ಅಂತಃಕರಣ. ಮುಖ್ಯವಾಗಿ, ತೀರಿಕೊಂಡ ನಂತರವೂ ಲಕ್ಷ್ಮಣನ ಹೃದಯದಲ್ಲಿ ನಿಂತು, ಅವನನ್ನು ಎಚ್ಚರಿಸಿ, ಬೆಳೆಸುವ ಜಯಲಕ್ಷ್ಮಿ-ಜಯ. ಕಾದಂಬರಿಯ ಕೊನೆಯಲ್ಲಿ ಲಕ್ಷ್ಮಣನು, ಎಂದೂ ಹಾಡದ, ಪೂರ್ವೀರಾಗವನ್ನು ಎತ್ತಿಕೊಂಡಾಗ, ಜಯ ಅದನ್ನು ಬೆಳೆಸುತ್ತಾ ಹೋಗುತ್ತಾಳೆ ಎನ್ನುವ ಸೂಚನೆ ಇದೆ. ಲಕ್ಷ್ಮಣನ ಪ್ರತಿಭೆಯು, ಸಂಗೀತದ ಗೌರೀಶಂಕರವನ್ನು ಮುಟ್ಟಿದ ಕ್ಷಣದಲ್ಲಿ, ಅವನ ತುಟಿಯಿಂದ "ಜಯ" ಎನ್ನುವ ಮಾತು ಚಿಮ್ಮುತ್ತದೆ. ಪ್ರೇಮ, ಪ್ರತಿಭೆ, ಕೈಕೈಹಿಡಿದು ‘ಸಂಧ್ಯಾರಾಗ’ದಿಂದ ‘ಉದಯರಾಗ’ದತ್ತ ಸಾಗುತ್ತವೆ.

ಅ.ನ.ಕೃ. ಅವರ ಆರಂಭದ ಕಾದಂಬರಿಗಳಲ್ಲಿ ಒಂದಾದ ಸಂಧ್ಯಾರಾಗದಲ್ಲಿ ಕಂಡು, ಅವರ ಎಲ್ಲಾ ಕಾದಂಬರಿಗಳಿಗೂ ಸಾಮಾನ್ಯವಾದ ಒಂದು ಅಂಶವನ್ನು ಇಲ್ಲಿ ಗಮನಿಸಬಹುದು. ಪ್ರಗತಿಶೀಲ ಪಂಥದ ನೇತಾರರಾಗಿ ಅವರು ವಾಸ್ತವಿಕತೆಯ ಪ್ರತಿಪಾದಕರಾದರು. ಆದರೂ ಅವರಲ್ಲಿ ಒಂದು ‘ರೊಮ್ಯಾಂಟಿಕ್’ ಎಳೆ ಇದ್ದೇ ಇದ್ದಿತು. ವಾಸ್ತವತೆಯನ್ನು ಮೀರಿದ, ಓಛಿತಿmeತಿ ಥಿಟಛಿu qಟಿಞe, ಸಾಮಾನ್ಯ ಆಕಾರವನ್ನು ಮೀರಿದ ವ್ಯಕ್ತಿತ್ವದಲ್ಲಿ, ಸಾಧನೆಯಲ್ಲಿ ಅವರಿಗಾಸಕ್ತಿ ಇತ್ತು. ವಾಸ್ತವತೆಯ ನೆಲದ ಮೇಲೆ ನಡೆಯುವ ಕ್ರಿಯೆ, ಇದ್ದಕ್ಕಿದ್ದಂತೆ ರೆಕ್ಕೆ ಪಡೆದುಕೊಂಡು, ಮೇಲೆ ಹಾರುತ್ತದೆ. ಕಾದಂಬರಿಯ ಪ್ರಾರಂಭದಲ್ಲಿಯೇ, ಸಾಮಾನ್ಯದ ನಡುವೆ, ದಾನಶೂರ ಕರ್ಣನ ಚೇತನ ಮಿನುಗುತ್ತದೆ. ಕಥೆ ಮುಂದುವರಿದಂತೆ, ತಟ್ಟನೆ ಕಾಣಿಸಿಕೊಂಡು ಮರೆಯಾಗುವ ಹೊಸಬ, ಇಂಥಹ ಅಸಾಧಾರಣತೆಯ ಒಂದು ನೆನಪು. ಲಕ್ಷ್ಮಣನೇ ವಾಸ್ತವತೆಯ ನೆಲೆಯಿಂದ ಅಸಾಧಾರಣತೆಯ ಕಡೆಗೆ ಸಾಗುತ್ತಾನೆ. ಮಣ್ಣಿನ ದೇಹದಲ್ಲಿ ದಿವ್ಯ ಸಾಧ್ಯತೆ ಅಡಗಿದೆ ಎಂದು ಮನುಷ್ಯನ ಮನಸ್ಸು ನಂಬುತ್ತದೆ; ಅದನ್ನು ಕಾಣಲು ಬಯಸುತ್ತದೆ. ಅಂಥಹ ದರ್ಶನ ಅ.ನ.ಕೃ ಕಾದಂಬರಿಯಲ್ಲಿ ಲಭ್ಯವಾಗುತ್ತದೆ.

ಸಂಧ್ಯಾರಾಗದ ಮತ್ತೊಂದು ಆಕರ್ಷಣೆಯನ್ನು ಇಲ್ಲಿ ಗಮನಿಸಬಹುದು. ಪ್ರತಿ ಸಮಾಜವೂ ಬದುಕಿನ ಬೇರೆ ಬೇರೆ ಬಿಂದುಗಳಲ್ಲಿ, ನಿಂತ ಜನರ ಆದರ್ಶಮಾದರಿಗಳನ್ನು ಬೆಳೆಸಿಕೊಂಡು ಬಂದಿರುತ್ತದೆ. ಆದರ್ಶ ತಂದೆ-ಆದರ್ಶಮಗ, ಆದರ್ಶ ಗಂಡ-ಆದರ್ಶ ಹೆಂಡತಿ, ಆದರ್ಶ ಒಡೆಯ-ಆದರ್ಶ ಸೇವಕ ಹೀಗೆ, ಸಮುದಾಯದ ಕೆಲವು ಕಲ್ಪನೆಗಳನ್ನು ಮೂಡಿಸಿಕೊಂಡಿರುತ್ತದೆ. ಮಹಾಕಾವ್ಯಗಳಲ್ಲಿ ಈ ಕಲ್ಪನೆಗಳು, ಪರ್ವತಾಕಾರದಲ್ಲಿ ರೂಪತಾಳುತ್ತವೆ. ಅ.ನ.ಕೃ ಅವರ ‘ಸಂಧ್ಯಾರಾಗ’ ಜನಮನದ ಅಸ್ಪಷ್ಟ ಕಲ್ಪನೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಸಾಕ್ಷಾತ್ಕಾರ ಮಾಡುತ್ತದೆ. ಶ್ರೀನಿವಾಸರಾಯರು, ಮೀನಾಕ್ಷಮ್ಮ, ಸಾವಿತ್ರಮ್ಮ, ಶಾಮಣ್ಣ, ಜಯ ಎಲ್ಲಾ, ಇಂಥಹ ಆದರ್ಶ ಗಂಡ, ಆದರ್ಶ ಒಡೆಯ, ಆದರ್ಶ ಪತ್ನಿ, ಆದರ್ಶ ಬಂಟರ ಸಾಕಾರ. ನಮ್ಮ ಮನಸ್ಸಿನಲ್ಲಿದ್ದ ಕಲ್ಪನೆಗಳು, ರಕ್ತ ಮಾಂಸದ ಶರೀರವನ್ನು ಪಡೆದು, ಮಾತನಾಡುತ್ತಾ, ಕ್ರಿಯೆಯಲ್ಲಿ ನಮ್ಮ ಮುಂದೆ ತೊಡಗುತ್ತ ನಿಂತಾಗ, the pleasure of recognision, ಗುರುತು ಹಿಡಿಯುವ ಸಂತೋಷ ಅನುಭವವಾಗುತ್ತದೆ.

ಸಂಧ್ಯಾರಾಗದ ವಿಷಯ ಹೇಳಬಹುದಾದ ಇನ್ನೂ ಹಲವು ಮಾತುಗಳಿವೆ. ಉದಾಹರಣೆಗೆ, ಕಾದಂಬರಿ ಚಿತ್ರಿಸುವ ಸಮಾಜದ ಸ್ಥಿತ್ಯಂತರ. ಅವಿಭಕ್ತ ಕುಟುಂಬಗಳ ಮೇಲೆ, ಹಳ್ಳಿಯ ಬದುಕಿನ ಮೇಲೆ, ಆಧುನಿಕ ಬದುಕಿನ ಮತ್ತು ನಗರ ಜೀವನದ ಪ್ರಭಾವ. ಆದರೆ ನನ್ನ ಪ್ರಸ್ತಾವನೆಯನ್ನು ಬೆಳೆಸದೆ, ಇಷ್ಟನ್ನು ಮಾತ್ರಾ ಹೇಳಿ ಓದುಗರಿಗೆ ಕಾದಂಬರಿಯ ಮೋಡಿಯ ಅನುಭವಕ್ಕೆ ದಾರಿ ಮಾಡುತ್ತೇನೆ. ಬದುಕಿನಲ್ಲಿ ಬಹು ಮುಖ್ಯವಾದ ಜೀವನಪರವಾದ ಅಂತಃಕರಣದ ಮಾಧುರ್‍ಯ ಸಿರಿವಂತಿಕೆಗಳ ದರ್ಶನವಾಗುತ್ತದೆ, ಈ ಕಾದಂಬರಿಯಲ್ಲಿ. ಜೊತೆಗೆ ಬಹು ಸೂಕ್ಷ್ಮ ಸಂವೇದನೆಯ ಸಂಗೀತ ಪ್ರತಿಭೆಯ ಐಹಿಕ ಯಾತನೆಯನ್ನು ಇಲ್ಲಿ ಕಾಣುತ್ತೇವೆ. ನಿತ್ಯ ಜೀವನದ ಘರ್ಷಣೆಗಳೂ, ಕಿರಿಕಿರಿಗಳು, ರಾಜಿಗಳನ್ನು ಮೀರಿದ ಜಗತ್ತಿಗೆ ಕೊಂಡೊಯ್ಯುತ್ತಾನೆ-ನಮ್ಮೊಳಗೆ ಇರುವ ಆದರ್ಶ ಪ್ರಿಯತೆ, ಔದಾರ್ಯ, ಸೃಜನಶೀಲತೆ ಇವುಗಳ ಸಾಕಾರ ಮೂರ್ತಿ, ‘ಸಂಧ್ಯಾರಾಗ’ದಲ್ಲಿ ಹೊಳೆದು, ಉರಿದಾಗ ಚಿಮ್ಮಿದ ಲಕ್ಷ್ಮಣ.

ಪ್ರೀತಿ ಮೊಳಕೆಯೊಡೆಯಲು ಎಷ್ಟು ಹೊತ್ತು...?


ಅವಳ ಕಣ್ಣ ಬೆಳಕಿನಲ್ಲಿ
ಫಳಕ್ಕನೆ ಹೊಳೆವ ಮಿಂಚಿತ್ತು
ಚಿಗರೆನಡಿಗೆಯ ಹುಡುಗಿ
ಮಾತು ಮಾತಿಗೂ ನಗೆ ಉಕ್ಕಿಸಿದಾಗ
ಹಾಲುಬೆಳದಿಂಗಳು
ಹರಿದ ಹಾಗಿತ್ತು.

 ಅವಳೊಳಗೆ
ಇನ್ನೂ ಮರಿಯಾಗದೆ
ಕಾವಿಡುವ ಮೊಟ್ಟೆಯಂತೆ
ಪ್ರೀತಿ ಬೆಚ್ಚಗಿತ್ತು.
ಯಾವ ಮಾಯದಲ್ಲೋ ನಾನು
ಅದನ್ನು ಮೆತ್ತಗೆ ತಟ್ಟಿದೆ.
ಮೊಟ್ಟೆ ಮರಿಯಾಗಲು
ಎಷ್ಟು ಹೊತ್ತು..?

ಅಲ್ಲೀಗ ಪುಟ್ಟ ಮರಿಗಳ ಕಲರವ
ಈಗ ಎಲ್ಲೆಲ್ಲೂ ಕನಸುಗಳ ಹೂ ಗೊಂಚಲು.
ಎಲೆ ಎಲೆಗೂ ತೊಟ್ಟಿಕ್ಕುವ ಹನಿ
ಅವರ ಕಾಲಡಿಯಲ್ಲಿ
ಇಡೀ ಜಗತ್ತು ಉರುಳಿಕೊಂಡಿದೆ ನೋಡಿ.

ಅವಳ ಕಣ್ಣ ಕೆಳಗಿನ ಕಪ್ಪು ತಿದ್ದಿ
ಬಿಳಿಗೂದಲೂ ಹರಿದು
ಕನ್ನಡಿಗೆ ಹೆದರುವ ಕಾಲಕ್ಕೆ
ಉದ್ದೋ ಉದ್ದ ಮಲಗಿದ ರಸ್ತೆಗಳು
ಮನೆಗೆ ಬಂದು ಉಸ್ಸೆಂದು ..!
ಕಾಲು ಚಾಚಿದರೆ
ಹಗಲಿಗೆ ವಿದಾಯ

 ನಿನ್ನ ದಮ್ಮಯ್ಯ
ಹಿಂದೆ ಹಿಂದೆ ಹೆಜ್ಜೆಹಾಖಿ ಓಡಲಾರೆ
ಕತ್ತು ತಿರುಗಿಸಿ ಹಿಂದಕ್ಕೂ ನೋಡಲಾರೆ ಎಲ್ಲ ಮರೆತು ಹೋಗಿದೆ.
ಈಗಿನದಷ್ಟೇ ಈಗ ನಿಜ
ಎದೆಯಲ್ಲಿ ಈಗಲೂ ಇರಬಹುದು
ಒಸರುವ ಹಸಿ ಜಾಗ
ಸ್ವಲ್ಪ ಚುಚ್ಚಿದರೂ ಚಿಮ್ಮಬಹುದು
ನೂರುಭಾವಗಳ ರಾಗ

ಪ್ರೀತಿಯಿಂದ ಪ್ರೀತಿಗಾಗಿ
"........" & "........" ?
ಕವಿ ,ಕನ್ನಡಿಗ ವಿಜಯ್ ಜಿ. ಹೆಮ್ಮರಗಾಲ

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹೆಮ್ಮರಗಾಲ.

ಕೌಂಡಿನ್ಯ ಮಹಾಕ್ಷೇತ್ರ ಸಂತಾನ ವೇಣುಗೋಪಾಲ ಸ್ವಾಮಿ  ದೇವಸ್ಥಾನ ಹೆಮ್ಮರಗಾಲ. ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ  `ಕೌಂಡಿನ್ಯ ಮಹಾಕ್ಷೇತ್ರ`...